Skip to main content

ವಿಜ್ಞಾನಿಯ ಕಣ್ಣಿನಲ್ಲಿ ಇತಿಹಾಸದ ಪಾಠಗಳು!


2020ರಲ್ಲಿ ಲಾಕ್ಡೌನ್ ಶುರುವಾದಾಗಿನಿಂದ  ಹತ್ತು ತಿಂಗಳು ನಾನು ಮಾಡಿದ್ದು ಪುಸ್ತಕ ಓದಿದ್ದು ಅಷ್ಟೇ. ಆಗ ತಾನೇ ಮನೆಯಲ್ಲಿ ಸುಮಾರು 30-40 ಪುಸ್ತಕಗಳು ಬಂದು ಕುಳಿತಿದ್ದವು. ಡಾ. ಕೆ. ಎನ್. ಗಣೇಶಯ್ಯ ಅವರ ಪುಸ್ತಕಗಳು, ತೇಜೋ ತುಂಗಭದ್ರಾ, ಪುನರ್ವಸು,ಮಧ್ಯಗಟ್ಟ ಎಲ್ಲವೂ ಪುಸ್ತಕದ ಷೆಲ್ಫ್ ಏರಿ ಕುಳಿತಿದ್ದವು. ಒಂದಿಷ್ಟು ಪುಸ್ತಕಗಳು ಮೊದಲೇ ಅಮ್ಮ ಮತ್ತು ಅಪ್ಪನಿಂದ ಬುಕ್ ಆಗಿಬಿಟ್ಟಿತ್ತು.ಮೊದಲು ಬರೀ ಮಕ್ಕಳ ಕಥೆಗಳನ್ನು ಮತ್ತು fantasyಗಳನ್ನೇ ಓದುತ್ತಾ ಐದಾರು ತಿಂಗಳು ಕಳೆದಿದ್ದ ನಾನು ಹೀಗೆ ಒಂದು ದಿನ  ಅಪ್ಪ ಗಣೇಶಯ್ಯನವರ ಕರಿಸಿರಿಯಾನದ ಬಗ್ಗೆ ಹೇಳುತಿದ್ದದ್ದನ್ನು ಕೇಳಿ ಕುತೂಹಲದಿಂದ ಮಧ್ಯದಲ್ಲಿನ ಯಾವುದೋ ಹಾಳೆ ತೆಗೆದು ಓದಿದೆ. ವಿಜಯನಗರದ ಹೆಸರನ್ನು ನೋಡಿ ಕುತೂಹಲ ಬಂತು. ಮೊದಲ ಪುಟದಿಂದ ಓದುತ್ತಾ ಹೋದೆ. ಅದೇ ತಿಂಗಳಲ್ಲಿ ಅವರ ಎಲ್ಲಾ ಪುಸ್ತಕಗಳನ್ನೂ ಓದಿ ಮುಗಿಸಿದ್ದೆ!
ಕರಿಸಿರಿಯಾನ  ಎಂಬ ಹೆಸರನ್ನು ಕೇಳಿ ಒಮ್ಮೆ ಗೊಂದಲವಾದರೂ ಕೊನೆಗೆ ಓದಿ ಮುಗಿಸಿದಾಗ ಹೆಸರಿನ ಒಳಾರ್ಥ ತಿಳಿಯಿತು. ಕರಿ ಎಂದರೆ ಆನೆ, ಸಿರಿ ಎಂದರೆ ಏನು ಎಂದು ವಿವರಿಸುವುದೇನೂ ಬೇಕಿಲ್ಲ, ಐಶ್ವರ್ಯ ಎಂದು ಅರ್ಥ. ಇನ್ನು  ಯಾನ ಎಂದರೆ ಪಯಣ. ಆನೆಯ ಮೇಲೆ ಐಶ್ವರ್ಯದ ಪಯಣ. ಇವರ ಎಲ್ಲಾ ಪುಸ್ತಕಗಳ ಹೆಸರುಗಳೂ ಹೀಗೆ ಪ್ರಾರಂಭವಾಗುವುದು ವಿಶೇಷ(ಉದಾಹರಣೆಗೆ: ಕನಕ ಮುಸುಕು, ಕಪಿಲಿಪಿಸಾರ ಇತ್ಯಾದಿ).ಜೊತೆಗೆ ಥ್ರಿಲ್ಲರ್ ರೀತಿಯಲ್ಲಿಯೇ ಓಡಿಸಿಕೊಂಡು ಹೋಗುವ ಈ ಪುಸ್ತಕದಲ್ಲಿನ ಕಥಾನಾಯಕಿ ಪೂಜಾ ನನಗೆ ತುಂಬಾ ಇಷ್ಟಪಟ್ಟ ಪಾತ್ರ .ಇತಿಹಾಸವನ್ನು ಇಷ್ಟು ಕುತೂಹಲಕಾರಿಯಾಗಿ ವಿವರಿಸಲು ಸಾಧ್ಯವೆಂದು ನಾನು ಎಂದೂ ಯೋಚಿಸಿರಲಿಲ್ಲ.ಜೊತೆಗೆ  historical fiction ಗಳನ್ನು ಮೊದಲ ಬಾರಿ ನಾನು ಓದಲು ಪ್ರಯತ್ನಿಸಿದ್ದು.ನನಗೆ  ಇತಿಹಾಸದ ಬಗ್ಗೆ ಕುತೂಹಲ ಹುಟ್ಟಲು ಈ ಪುಸ್ತಕಗಳೆ ಕಾರಣವಾಗಿದ್ದು ಸುಳ್ಳಲ್ಲ. 
ಕರಿಸಿರಿಯಾನದ ನಂತರ ನನ್ನ ಹತ್ತಿರದ ಊರಿನದೇ  ರಾಣಿಯಾಗಿದ್ದರೂ ಅಪರಿಚಿತವಾಗಿಯೇ ಉಳಿದಿದ್ದ ಗೇರುಸೊಪ್ಪದ ರಾಣಿ ಚೆನ್ನಭೈರಾದೇವಿಯ ಬಗ್ಗೆ ಇದ್ದ ಇದೇ ಕರಿಸಿರಿಯಾನದ ಪಾತ್ರಗಳನ್ನೇ ಇಟ್ಟುಕೊಂಡು ಬರೆದಿರುವ ಬಳ್ಳಿಕಾಳಬೆಳ್ಳಿ ಓದಿದೆ. ನನಗೆ ಗೇರುಸೊಪ್ಪದಲ್ಲಿ ಒಬ್ಬ ರಾಣಿಯೂ ಇದ್ದಳು ಎಂದೂ ತಿಳಿದಿರಲಿಲ್ಲ. SS Gerusoppa ಎಂಬ ಹಡಗಿನಲ್ಲಿದ್ದ ಬೆಳ್ಳಿ, ಕಾಡಿನಲ್ಲಿ ಸಿಗುತ್ತಿದ್ದ ಬಳ್ಳಿಕಾಳು ಎಲ್ಲವೂ ಮರೆತುಹೋಗಿದ್ದ ರಾಣಿಯ ಕಥೆಯನ್ನು ಮತ್ತೆ  ನೆನಪಿಸಿದಂತಿದೆ. ತುಂಬಾ ಚೆನ್ನಾಗಿ ಓದಿಸಿಕೊಂಡು ಹೋದ ಪುಸ್ತಕ. ಉತ್ತರಕನ್ನಡ ಮತ್ತು ಪೋರ್ಚುಗೀಸರ ನಡುವಿನ ಸಂಬಂಧ, ಚೆನ್ನಭೈರಾದೇವಿಯ ಆಡಳಿತ ಎಲ್ಲವೂ ನನಗೆ ಹೊಸ ವಿಷಯಗಳೆ. ನನ್ನೂರನ್ನೂ ಒಂದಾನೊಂದು ಕಾಲದಲ್ಲಿ ಆಳಿದ್ದ ರಾಣಿಯ ಬಗ್ಗೆ ಓದಿದ್ದು ತುಂಬಾ ಖುಷಿ ಕೊಟ್ಟಿತು.

ಈ ಪುಸ್ತಕಗಳ ನಂತರ ನಾನು ಗಣೇಶಯ್ಯನವರೆ ಬರೆದ, ಆಗ ತಾನೇ ಬಿಡುಗಡೆಯಾಗಿದ್ದ ಸಸ್ಯ ಸಗ್ಗ ಓದಲು ಶುರು ಮಾಡಿದೆ. ನನಗೆ ತುಂಬಾ ಇಷ್ಟವಾದ ಪುಸ್ತಕಗಳಲ್ಲಿ ಇದೂ ಒಂದು.ಗಿಡಗಳಲ್ಲೂ ಇರುವ ಸೋದರದ್ವೇಷ, ತಾಯಿಮಕ್ಕಳ ಕಲಹ ಇತ್ಯಾದಿಗಳ ಬಗ್ಗೆ ಸರಳವಾಗಿ ಅರ್ಥವಾಗುವ ಹಾಗೆ ಬರೆದಿರುವ ಪುಸ್ತಕ. ಪುಸ್ತಕ ಮೊದಲು ಯಾರು ಓದುವುದೆಂದು ಮನೆಯಲ್ಲೂ ತಾಯಿ ಮಕ್ಕಳ ಕಲಹ ಒಮ್ಮೆ ನುಸುಳಿ ಬಂದಿದ್ದಂತೂ ಹೌದು. ಬೀನ್ಸ್ಗಳನ್ನು ಕಂಡಾಗ ನಾನು ಅದರಲ್ಲಿ ಓದಿದ್ದು ನೆನಪಾಗುತ್ತದೆ. ಒಂದು ಓದಲೇಬೇಕಾದ ಪುಸ್ತಕ. ಒಮ್ಮೆ ಈ ಪುಸ್ತಕ ಓದಿದ ನಂತರ ನನಗೆ ತಾರುಮಾರು,ಬಿನ್ನ ಬಿಂಬ ಮುಂತಾದ ಪುಸ್ತಕಗಳ ಬಗ್ಗೆ ಆಸಕ್ತಿ ಹುಟ್ಟಿತು. ಲೇಖನಗಳನ್ನು ಓದಲು ಶುರು ಮಾಡಿದೆ. ಈ ಪುಸ್ತಕಗಳ ನಂತರ ನಾನು ಮತ್ತೆ fiction ಗಳಿಗೆ ಹಿಂದಿರುಗಿದೆ. ಅಮ್ಮ  ಮೊದಲು ಸುಧಾದಲ್ಲಿ ದಾರಾವಾಹಿ ರೂಪದಲ್ಲಿ ಬರುತ್ತಿದ್ದ ಈಗ ಪುಸ್ತಕವಾಗಿರುವ ಕನಕ ಮುಸುಕುವಿನ ಬಗ್ಗೆ ಹೇಳಿದಳು. ಅದಾಗಲೇ historical fictionಗಳನ್ನು ಇಷ್ಟಪಡಲು ಪ್ರಾರಂಭಿಸಿದ್ದ ನಾನು ಖುಷಿಯಿಂದ ಓದಲು ಪ್ರಾರಂಭಿಸಿದೆ. ಮುಸುಕಿನ ಜೋಳ  ಮೊದಲೇ ಭಾರತದಲ್ಲಿ ಇತ್ತೆ ಎಂಬ ಪ್ರಶ್ನೆ ಹುಟ್ಟುಹಾಕಿದ್ದು ಇದೆ ಪುಸ್ತಕ. ಈ ಪುಸ್ತಕ ಮುಗಿಯುತ್ತಿದ್ದಂತೆ ನಾನು ಚಿತಾದಂತ, ಶಿಲಾಕುಲವಲಸೆ,ಮೂಕಧಾತು, ಏಳು ರೊಟ್ಟಿಗಳು ಮುಂತಾದ ಎಲ್ಲಾ fictionಗಳನ್ನೂ ಓದಿ ಮುಗಿಸಿದೆ.
ಚಿತಾದಂತವನ್ನು ಅದೆಷ್ಟು ಸಾರಿ ಓದಿದೆನೋ ಗೊತ್ತಿಲ್ಲ. ನಾವು ಶಾಲೆಯ ಪಠ್ಯ ಪುಸ್ತಕದಲ್ಲಿ 'ಅಶೋಕನನ್ನು ದೇವಾನಾಂಪ್ರಿಯ ಪ್ರಿಯದರ್ಶಿ ಎಂದು ಕರೆಯುತ್ತಾರೆ. ಅವನು ಪ್ರಜೆಗಳೆ ತನ್ನ ಮಕ್ಕಳಿದ್ದಂತೆ ಎಂದು ಹೇಳಿದನು. ಅಶೋಕನು ತನ್ನ ಮಕ್ಕಳಾದ ಮಹೀಂದ್ರ ಮತ್ತು ಸಂಘಮಿತ್ತ ರನ್ನು ಧರ್ಮಪ್ರಚಾರಕ್ಕೆ ಶ್ರೀಲಂಕೆಗೆ ಕಳುಹಿಸಿದ 'ಎಂದು 5 ನೇ ತರಗತಿಯಿಂದ ಓದಿ ಸಾಕಾಗಿದ್ದ ನನಗೆ ಈ ಪುಸ್ತಕ ಅಶೋಕನು ಒಳ್ಳೆಯ ರಾಜನೋ ಅಥವಾ ಕೆಟ್ಟ ರಾಜನೋ ಎಂಬ ಜಿಜ್ಞಾಸೆಯಸನ್ನು ಹುಟ್ಟುಹಾಕಿತು. ಏನೇ ಆದರೂ ಅಶೋಕ ಮಾತ್ರ ನನಗೆ ತುಂಬಾ ಇಷ್ಟವಾದ, ಕುತೂಹಲ ಮೂಡಿಸಿದ ಇತಿಹಾಸದ ಒಂದು ಭಾಗವಾಗಿಯೇ ಉಳಿದಿದ್ದಾನೆ.
ವಿಶೇಷವೆಂದರೆ ಮೇಲೆ ಹೇಳಿದ ಎಲ್ಲಾ ಪುಸ್ತಕಗಳ ಕಥಾನಾಯಕಿ ಪೂಜಾ ಒಬ್ಬ archeologist. ಇದು ಒಂದು ಸಿರೀಸ್ ರೀತಿಯಲ್ಲಿಯೇ ಮುಂದುವರೆದಿದೆ. ನನಗೆ ಏಳು ರೊಟ್ಟಿಗಳು,ರಕ್ತಸಿಕ್ತ ರತ್ನಗಳನ್ನು ಓದುವಾಗ ಮೊದಲಿನ ಪಾತ್ರ ಪೂಜಾಳನ್ನು ಮಿಸ್ ಮಾಡಿಕೊಂಡಿದ್ದು ಸುಳ್ಳಲ್ಲವಾದರೂ ಈ ಹೊಸ ಪಾತ್ರಗಳೂ ಇಷ್ಟವಾದವು.
ಇಷ್ಟು ದಿನವಾದರು ಯಾಕೋ ಕಥಾಸಂಕಲನಗಳ ಸುದ್ದಿಗೆ ಹೋಗಿರಲಿಲ್ಲ. ಮನೆಗೆ ಪುಸ್ತಕ ತೆಗೆದುಕೊಂಡು ಹೋಗಲು ಬಂದಿದ್ದ ಒಬ್ಬರು ನಾನು ಮೂಕಧಾತು ಓದುತಿದ್ದದ್ದನ್ನು ನೋಡಿ ಕಥಾಸಂಕಲನಗಳನ್ನೂ ಓದು ಎಂದು ಸಲಹೆ ನೀಡಿದರು. ಸರಿ ಓದೋಣವೆಂದು ಸಿಗೆರಿಯ ಪುಸ್ತಕವನ್ನು ಹಿಡಿದು ಕುಳಿತೆ.ಅದೇ ಒಂದು ವಾರದಲ್ಲಿ ಮತ್ತೆ ಉಳಿದ ಎಲ್ಲಾ ಪುಸ್ತಕಗಳನ್ನು ಓದಿ ಮುಗಿಸಿದೆ. ನನಗೆ ಇತಿಹಾಸದಲ್ಲಿ ಎಂದೂ ಇಲ್ಲದ ಆಸಕ್ತಿಯನ್ನು ತಂದುಕೊಟ್ಟಿದ್ದು ಕೆ.ಎನ್.ಗಣೇಶಯ್ಯನವರ ಪುಸ್ತಕಗಳು. 

  2020 ರಲ್ಲಿ ನಾನು ಶಾಲೆಯಲ್ಲಿದ್ದರೆ ಏನು ಕಲಿಯುತ್ತಿದ್ದನೋ ಅದನ್ನೇ ಇನ್ನೂ ಆಸಕ್ತಿದಾಯಕವಾಗಿ, ಖುಷಿಯಿಂದ ಕಲಿತಿದ್ದೆ. ಕಲಿಕೆ ಹೊಸರೀತಿಯಲ್ಲಿ ಆಯಿತು ಅಷ್ಟೇ! ಇತಿಹಾಸ ಎಂದರೆ ಬರೀ ಇಸವಿಗಳನ್ನು ಉರು ಹೊಡೆಯುವುದಲ್ಲ ಎಂದು ನೆನಪಿಸಿದ್ದು ಕೆ. ಎನ್. ಗಣೇಶಯ್ಯನವರ ಪುಸ್ತಕಗಳು, ಮತ್ತು ಇತಿಹಾಸವನ್ನು ಓದುವಂತೆ ಮಾಡಿದ ಲಾಕ್ ಡೌನ್!

PLEASE FILL OUT THIS BLOG SURVEY!




Comments

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರಜ್ನೆ ಇದೆಯೆ? ಭೂಮಿಯೂ ಒಂದು ಜೀವಿಯೆ?       ಈಗ ಜಾಗತಿಕ ವಿಷಯಗಳನ್ನು

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ್ ಮಾಡಿಗಿದ" ಎಂದು ನಂಬಿಸಿದ್ದಳು! ಅಂತೂ ಸಮಸ್ಯ

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ