Skip to main content

ಕಾಡಿನ ಹಾಡು!

ಇವತ್ತು ದೀಪಾವಳಿ ರಜೆಗೆಂದು ಮನೆಗೆ ಬಂದಾಗ , ಮನೆಯಲ್ಲಿ ಎರಡು ಮೂರು ಸೌಂಡ್ ರೆಕಾರ್ಡರ್ ಗಳು ಬಂದು ಕುಳಿತಿದ್ದವು.  ಅವು ಏಕೆ ಬಂದಿದೆ ಎಂದು  ಕುತೂಹಲದಿಂದ ಕೇಳಿದಾಗ,ಈ ಉಪಕರಣಗಳನ್ನು ಜೀವ ವಿಜ್ಞಾನಿ Dr. ಕೆ. ವಿ ಗುರುರಾಜ ಅವರು ಕೊಟ್ಟಿದ್ದು, ಇವು ಕಾಡನ್ನು ಕೇಳುವ  ಹೊಸ ಅಧ್ಯಯನದ  ಪರಿಕರಗಳೆಂದು ಎಂದು ತಿಳಿಯಿತು. ಆದರೆ ಕಾಡು ಕೇಳುವುದೆಂದೆಂದರೆ? ಕಾಡನ್ನು ನೋಡಬಹುದೆ ಹೊರತು, ಕೇಳಲು ಸಾಧ್ಯವಿಲ್ಲ ಎಂದಲ್ಲವೇ? 
   ಕೇಳಬಹುದು. ನೀವು ಎರಡು ನಿಮಿಷ ಹೊರಗಿನ ಪರಿಸರಕ್ಕೆ ಕಿವಿಗೊಟ್ಟು  ಕೇಳಿ. ಅದು ಮರುಭೂಮಿಯಾಗಿದ್ದರು ಯಾವುದಾದರೂ ಸದ್ದು ಕೇಳಿಸುತ್ತದೆ. ಅದು ವಾಹನಗಳ ಸದ್ದೇ ಆಗಿರಬಹುದು. ಅಥವಾ ಹಕ್ಕಿಗಳ ಚಿಲಿಪಿಲಿಯೇ ಆಗಿರಬಹುದು. ಅಥವಾ ಎಲೆಗಳೆ ಆಗಿರಬಹುದು. ಇಂತಹ ಸದ್ದುಗಳನ್ನು soundscapes ಎನ್ನುತ್ತಾರೆ. 
             ಹೀಗೆ ಕಾಡಿನಲ್ಲಿ ಸಿಗುವ ಸದ್ದುಗಳನ್ನು ರೆಕಾರ್ಡ್  ಮಾಡಿ ಅದರ ಮೂಲಕ ಕಾಡನ್ನು ಮತ್ತೊಂದ ದೃಷ್ಟಿಕೋನದಿಂದ ನೋಡಬಹುದದಲ್ಲವೇ? ಇದಕ್ಕೇ ನಾನು ಕಾಡನ್ನು ಕೇಳಬಹುದು ಎಂದಿದ್ದು. ನಾನು ಮೊದಲೊಮ್ಮೆ camera traps ಗಳ ಮೂಲಕ ಕಾಡಿನ ಚಲನವಲನಗಳನ್ನು ಗಮನಿಸುವ ಬಗಗೆ  ಬರೆದಿದ್ದೆ. ಅದು ಕಾಡು ನೋಡುವ ಪರಿ. ಇದು ಕಾಡು ಕೇಳುವ ಪರಿ. 


ಕಳೆದ ವಾರವಷ್ಟೆ ಈ  soundscapes  ಬಗ್ಗೆ ಓದಿದ್ದ ನನಗೆ, ಮನೆಗೆ ಈ ಉಪಕರಣಗಳು ಬಂದಿದ್ದು ತುಂಬಾ ಖುಷಿಯಾಯಿತು. ಈ ರೆಕಾರ್ಡರ್‌ಗಳೊಂದಿಗೆ ಕೆಲಸ ಮಾಡಿದ ವಿಜ್ಞಾನಿಗಳಲ್ಲಿ ಒಬ್ಬರು ಬರ್ನಿ ಕ್ರೌಸ್. ಅವರು 1968 ರಲ್ಲಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು. ನೀವು ಅವರ ಭಾಷಣವನ್ನು ಟೆಡ್ ಟಾಕ್ಸ್ ನಲ್ಲಿಯೂ ಕೇಳಬಹುದು. ಅವರು ತಮ್ಮ 53 ವರ್ಷಗಳ ಕೆಲಸದಲ್ಲಿ ನೈಸರ್ಗಿಕ ಸೌಂಡ್‌ಸ್ಕೇಪ್‌ಗಳ ನಷ್ಟವನ್ನು ಉಲ್ಲೇಖಿಸಿದ್ದಾರೆ. ಸೌಂಡ್ ಸ್ಕೇಪ್ ನಷ್ಟಕ್ಕೆ habitat loss ಕೂಡ ಪ್ರಮುಖ ಕಾರಣ ಎಂದು ಅವರು ಹೇಳುತ್ತಾರೆ.
 ಸೌಂಡ್ ರೆಕಾರ್ಡರ್ ಗಳ ಮೂಲಕ ಕಾಡನ್ನು ನೋಡುವ ರೀತಿಗೆ bio-acoustics ಎನ್ನುತ್ತಾರೆ. ಬಾವಲಿಗಳು, ಬ್ಲ್ಯೂ ವ್ಹೇಲ್ ಗಳು ಹೊರಡಿಸುವ ಮನುಷ್ಯರ ಕಿವಿಗೆ ಕೇಳಿಸದ frequencyಯಲ್ಲಿರುವ ಸದ್ದುಗಳನ್ನೂ ಕೇಳಬಹುದು. ಈ ರೆಕಾರ್ಡರ್ ಗಳ ಮೂಲಕ ಹಲವು ಹೊಸ ಜೀವಿಗಳು ಪತ್ತೆಯಾಗಿವೆ. ಕಾಡಿನ ಯಾವುದೋ ಮೂಲೆಯಲ್ಲಿ   ಅವಿತು ಕುಳಿತ ಅದೆಷ್ಟೋ ಚಿಕ್ಕ ಚಿಕ್ಕ ಜೀವಿಗಳು ಹೀಗೆ ಸಿಗಬಹುದು! ಇದೆ ರೀತಿ ಕೆಲವು ಅಳಿದುಹೋಗಿದೆ  ಭಾವಿಸಲಾಗಿದ್ದ ಜೀವಿಗಳೂ ಸಿಕ್ಕಿವೆಯಂತೆ.
ಜೊತೆಗೆ ಈ ಸೌಂಡ್ ರೆಕಾರ್ಡರ್ ಗಳಿಂದ ಹಲವು ಕಾಡುಗಳ್ಳರೂ  ಸಿಕ್ಕಿಬಿದ್ದಿದ್ದಾರೆ. ಯಾರೆ ಕಾಡಿಗೆ ಬಂದು ಮರ ಕಡಿದರೂ, ಶಿಕಾರಿ ಮಾಡಿದರೂ ರೆಕಾರ್ಡ್ ಆಗಿಬಿಡುತ್ತದಲ್ಲ...
   ಈ ಸೌಂಡ್ ರೆಕಾರ್ಡರ್ ಗಳು ದೊಡ್ಡ ಪೆಟ್ಟಿಗೆಗಳಂತಿದ್ದವು ಎಂದೆನಲ್ಲ, ಅವು ಕೇವಲ ರೆಕಾರ್ಡರ್ ಗಳ ರಕ್ಷಣೆಗಳಿಗೆ ಮಾತ್ರವಂತೆ. ನಿಜವಾದ ರೆಕಾರ್ಡರ್ ಅದರ ಒಳಗಡೆ ಕುಳಿತಿರುತ್ತದೆ.

ಇದು ನಿಜವಾದ ಸೌಂಡ್ ರೆಕಾರ್ಡರ್. 

ಇವತ್ತು ಬೆಳಿಗ್ಗೆ ಜೇನಿನ ಸದ್ದನ್ನು ರೆಕಾರ್ಡ್ ಮಾಡಿ ನೋಡಲು ಹೂ ಬಿಡುತ್ತಿದ್ದ  ಹೊನಗಲು ಮರ ಮತ್ತು ನಮ್ಮ ತೋಟದ ಅಡಿಕೆ ಮರಕ್ಕೆ  ಬಂದ ಸಿಂಗಾರಕ್ಕೆ ಒಂದೊಂದು  ರೆಕಾರ್ಡರ್ ಕಟ್ಟಿದ್ದೆವು. 


ಹೊನಗಲು  ಮರಕ್ಕೆ ಕಟ್ಟಿರುವ ರೆಕಾರ್ಡರ್ 
 
ರೆಕಾರ್ಡ್ ಆದ ಸೌಂಡ್ ಗಳ visualization  

 ಈಗ ನಮ್ಮನೆಯಲ್ಲಿರುವ ಉಪಕರಣಗಳನ್ನು ನೋಡಿದರೆ, ಅವುಗಳಿಂದ ಕಾಡನ್ನು ನೋಡಬಹುದು( ಕ್ಯಾಮೆರಾ trap ) , ಕಾಡನ್ನು ಕೇಳಬಹುದು (ಸೌಂಡ್ ರೆಕಾರ್ಡರ್), ಕಾಡಿನ ತಾಪಮಾನವನ್ನು ಸಹ ನೋಡಬಹುದು  (thermal camera ). ಇನ್ನೂ ರುಚಿಯ ಮೂಲಕ ಕಾಡನ್ನು ಸವಿಯುವುದು  ತುಂಬಾ ಹಳೆಯದು. ಆದರೂ ಇದಕ್ಕೆಂದು  ಇನ್ನೂ ಯಾವುದೋ ಉಪಕರಣವೆಂದು  ಬಂದಿಲ್ಲ. ಜೊತೆಗೆ ಇನ್ನೂ ಮೂಗಿನ ಮೂಲಕ ಕಾಡನ್ನು ಆಘ್ರಾಣಿಸುವುದು ಒಂದು ಉಳಿದಿದೆ.  ಉಳಿದಿದರುವುದು ಇವೆರಡರ  ಮೂಲಕ ಕಾಡನ್ನು ಅವಲೋಕಿಸುವ ಪರಿ ಮಾತ್ರ. ಇವಕ್ಕೂ ಒಂದು technology  ಬಂದುಬಿಟ್ಟರೆ ಎಷ್ಟು ಚೆನ್ನಾಗಿರಬಹುದು ಅಲ್ಲವೇ? 
Reference :
Balachandra hegde,
Dr. K.V. Gururaja


Comments

  1. Fantastic writing Vanya! Just on a cautionary note, technology should not take away our real feel of the forest!

    ReplyDelete

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರಜ್ನೆ ಇದೆಯೆ? ಭೂಮಿಯೂ ಒಂದು ಜೀವಿಯೆ?       ಈಗ ಜಾಗತಿಕ ವಿಷಯಗಳನ್ನು

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ್ ಮಾಡಿಗಿದ" ಎಂದು ನಂಬಿಸಿದ್ದಳು! ಅಂತೂ ಸಮಸ್ಯ

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ