Skip to main content

ಮಳೆಗಾಲವೆಂಬ ಸರ್ಕಸ್ ಕಂಪೆನಿ!!



ಮಲೆನಾಡಿನಲ್ಲಿ ಮಳೆಗಾಲ ಎಂದರೆ ಒಂದು ರೀತಿಯಲ್ಲಿ ಹೊಸ ವರ್ಷದ ಪ್ರಾರಂಭ. ಮಕ್ಕಳಿಗೆ ಶಾಲೆ ಶುರುವಾಗುವ ಸಮಯ, ರೈತರಿಗೆ ಗದ್ದೆ ನೆಟ್ಟಿಯ ಸಮಯ, ಹೊಸ ಕೊಡೆ, ಕಂಬಳಿ ಕೊಪ್ಪೆ, ರೈನ್ ಕೋಟುಗಳು ಊರುತುಂಬಾ ಓಡಾಡುವ ಸಮಯ. 

    ಮಳೆಗಾಲ ಶುರುವಾಗುತ್ತಿದ್ದಂತೆ ಅದೆಲ್ಲಿಂದಲೋ ಬಸವನ ತಲೆ ಹೂವು, ನಾಗದಾಳಿ ಹೂವು, ಕೆಂಪು , ಬಿಳಿ ಬಣ್ಣದ ರೈನ್ ಲಿಲಿಗಳು ಎಲ್ಲವು ಪ್ರತ್ಯಕ್ಷವಾಗುತ್ತವೆ. ಒಣಗಿದ್ದ ನೆಲದಲ್ಲಿ ಹುಲ್ಲು ನಿಧಾನವಾಗಿ ಬೆಳೆದು ಹಸಿರಾಗುತ್ತದೆ. ಮಾವಿನ ಹಣ್ಣಿನ ಕಾಲ ಮುಗಿದು ಹಲಸಿನ ಕಾಲ ಶುರುವಾಗುತ್ತದೆ. 

 "ಈ ವರ್ಷ ಅಡಿಕೆಗೆ ಕೊಳೆ ಬಂದೊತೊ ಮಾರಾಯ" ಎಂಬ ಮಾತುಗಳು ಸಾಮಾನ್ಯ. "ಹೊಸ ಶಾಲೆ ಬ್ಯಾಗು ಬೇಕಾಗಿತ್ತು" , "ನನ್ನ ಕೊಡೆ ಅವ ಮುರಿದು ಹಾಕ್ಬುಟ" ಎಂಬ ದೂರುಗಳು ಶಾಲೆಗಳನ್ನು ತುಂಬಿರುತ್ತವೆ. ಇವೆಲ್ಲಾ ನಮ್ಮೂರಿನವರಿಗೆ ಬಹಳ ಪರಿಚಿತವಾದದ್ದು. 
ಮಳೇಗಾಲದ ಟೈಮ್ ಟೇಬಲ್ ಪ್ರಕಾರ ಮೊದಲ ಒಂದೆರಡು ವಾರಗಳಲ್ಲಿ ಒಂದು ಜ್ವರವೋ, ನೆಗಡಿಯೋ ಆಗಿ ಮುಗಿಯಬೇಕು ನಂತರದ ಅಗಸ್ಟ್ ತಿಂಗಳಲ್ಲಿ ಒಮ್ಮೆ ಭಾರಿ ಮಳೆಯಾಗಿ ಹೊಳೆ ಹತ್ತಿ ಬಂದು ವಾರಗಳ ಕಾಲ ಇಂಟರ್ನೆಟ್ , ಸಿಗ್ನಲ್ಲು ಕರೆಂಟ್ ಏನೂ ಇಲ್ಲದೇ ಶಾಲೆಗಳು, ಆಫ಼ೀಸುಗಳು ಎಲ್ಲವು ಮುಚ್ಚಿ ಕೂರಬೇಕು. ಈ ಹೊಳೆ  ಬೇಗ ಹತ್ತಿ ಬರಲೆಂದು  ಎಲ್ಲಾ ಮಕ್ಕಳ ಪ್ರಾರ್ಥನೆ. ಹೀಗಾಗಿ ನಮಗೆ ಮಳೆಗಾಲವೇ ಲಾಕ್ ಡೌನ್.
 
ಹೊಳೆ ಹತ್ತಿ ಬಂದಾಗ  ಮೊಬೈಲು, ಟಿವಿ ಏನೂ ಇಲ್ಲದೇ ಹಳೆ ದೇವರ ಪಾದವೇ ಗತಿ ಎಂಬಂತೆ ರೆಡಿಯೋ ಮಾತಾಡಲು ಶುರು ಮಾಡುತ್ತದೆ. ಮನರಂಜನೆಗಾಗಿ ಹೊಳೆ ನೋಡಲು ಮಕ್ಕಳು, ದೊಡ್ಡವರು ಎನ್ನದೇ ಎಲ್ಲರೂ ಬರುತ್ತಾರೆ.  "ಹಿಂದಿನ ವರ್ಷ ಇನ್ನೂ ಹೆಚ್ಚು ಹತ್ತಿತ್ತಾ, ಅಲ್ನೋಡು ಅದೇ ಅಲ್ಲಿ ಗುರುತು ಹಾಕಿಟ್ಟಿದಿದ್ದ್ಯ " ಎನ್ನುವ  ಹೊಳೆಯ ಖಾಯಮ್ ವೀಕ್ಷಕರು, ಹೊಳೆಯಲ್ಲಿ ತೇಲಿ ಬರುವ ತೆಂಗಿನಕಾಯಿ ಹಿಡಿಯುವ  ಜನರು, ಅವರು ಒಂದೊಂದು ತೆಂಗಿನಕಾಯಿ ಹಿಡಿದಾಗಲೂ ಯಾವ ಕ್ರಿಕೆಟ್ ಕಾಮೆಂಟರಿ ಮಾಡುವವರಿಗೂ  ಕಮ್ಮಿ ಇಲ್ಲದಂತೇ ಕಾಮೆಂಟರಿ ಮಾಡುವವರು, ಆ ಜಾರುವ ನೆಲದಲ್ಲಿಯೂ ಬೈಕು ಓಡಿಸಲು ಹೋಗಿ ಕೈಕಾಲು ಮುರಿದುಕೊಳ್ಳುವ  ಸಾಹಸಿಗಳು, ಅಪರೂಪಕ್ಕೆ ಸಿಗುವ ಸಂಬಂಧಿಕರು, "ಸರಕುಳಿಯಲ್ಲಿ ಹೆಬ್ಬಾವು ಬಂದಿತ್ತಡ" ಎಂದೆಲ್ಲಾ ಗಾಳಿಸುದ್ದಿಯ ಪ್ರಚಾರಕರು ಹೀಗೇ ಎಲ್ಲರೂ ನೆರೆದಿರುತ್ತಾರೆ. ಇದೂ ಒಂಥರಾ ಹಬ್ಬವೆ!

ಇನ್ನು "ಅತ್ಗೆ ನಂಗೆ ಆ ಕೆಂಪಿ ಡೇರೆ ಹೂವಿನ ಬುಡ ಕೊಡೆ" ಎಂದು ಆಗಲೆ ಎಲ್ಲರ ಬೈಕು, ಕಾರುಗಳ ಮೇಲೆ ಹೂವಿನ ಗಿಡಗಳು, ಹೊಸದಾಗಿ ತಂದ ಅಡಿಕೆ ಸಸಿಗಳು, ತರಕಾರಿ ಸಸಿಗಳು ಓಡಾಡಲು ಶುರು.

. ಯಾರ ಮನೆಯಲ್ಲಿ ಏನೆ ಕಾರ್ಯಕ್ರಮ ಇದ್ದರೂ ಎಲ್ಲರೂ ಹೊರಡುವಾಗ ತಮ್ಮ ಬಳಿ ಇಲ್ಲದ ಒಂದೊಂದು  ಹೂವಿನ ಸಸಿಗಳನ್ನು  ತೆಗೆದುಕೊಂಡು ಹೋಗೇ ಹೋಗುತ್ತಾರೆ. ನರ್ಸರಿಗಳಲ್ಲಿ ಅಡಿಕೆ ಸಸಿಗಳಿಗೆ ವಿಪರೀತ ಬೇಡಿಕೆ! 

ಇನ್ನು ಶಾಲೆಯ ವಿಷಯಕ್ಕೆ ಬಂದರೆ , ಹೊಸ ಪಟ್ಟಿ, ಪುಸ್ತಕ, ವನಮಹೋತ್ಸವ, ಹೊಸದಾಗಿ ಬಂದ ಒಂದನೇ ತರಗತಿಯ ಮಕ್ಕಳು, "ಈ ವರ್ಷ ಕನ್ನಡ ಪುಸ್ತಕ ಬಂಜೆ ಇಲ್ಯಾ" ಎನ್ನುವ ಮಕ್ಕಳು, ಪ್ರತಿಭಾ ಕಾರಂಜಿಗಾಗಿ ನೃತ್ಯ, ಹಾಡು, ಎಂದೆಲ್ಲ  ತಯಾರಿ ನಡೆಸುವ ಮಕ್ಕಳು, ಹಾಡನ್ನು  ಹಾಡುವ ದಿನವೇ ದ್ವನಿ ಬಿದ್ದು  ಪೇಚಿಗೆ ಸಿಲುಕುವವರು, ಚಿತ್ರಕಲೆ ಸ್ಪರ್ಧೆಯಲ್ಲಿ ಬಣ್ಣವನ್ನು ಹಾಳೆಯ ಮೇಲೆ ಚೆಲ್ಲಿಕೊಂಡು ಪರಿತಪಿಸುವವರು ಎಲ್ಲರೂ ಸಿಗುತ್ತಾರೆ. 

ಮಳೆಗಾಲದಲ್ಲಿ ಬಿಕ್ಕೆ ಹಣ್ಣು ಹೆಕ್ಕಲು ಅಲೆಯುವುದು, ಗಮಟೆಕಾಯಿ, ಧೂಪದ ಕಾಯಿಗಾಗಿ ಊರು ಅಲೆಯುವುದು, ಕೊಡೆ ಮರೆತು ಮಳೆಯಲ್ಲಿ ನೆನೆದುಕೊಂಡು ಬರುವುದು, ಚೌತಿ ಹಬ್ಬದಲ್ಲಿ ಮುಳುಗಿಸಿದ ಗಣಪತಿ ಮೂರ್ತಿಯಿಂದ ಇಲಿ ಮತ್ತು ಹಾವು ತೆಗೆದು ಇಟ್ಟುಕೊಳ್ಳುವುದು, ಎಲ್ಲವೂ ಮಳೆಗಾಲದ  ಅವಿಭಾಜ್ಯ ಅಂಗಗಳೆ.

ಬೇಸಿಗೆಯಲ್ಲಿಯೇ ಮಾಡಿಟ್ಟ  ಹಪ್ಪಳ, ಸಂಡಿಗೆಗಳು ಮಳೆಗಾಲದಲ್ಲಿ ಹೊರಬರುತ್ತವೆ. ಸುಟ್ಟ ಹಲಸಿನ ಬೇಳೆ, ಬಿಸಿಲಲ್ಲಿ ತಿರುಗಿ ಹುಡುಕಿದ ಗೇರುಬೀಜಗಳ ಸೀಸನ್ ಶುರುವಾಗುತ್ತದೆ. ಮಳೆಗಾಲವೆಂದರೆ ಎಲ್ಲರಿಗೂ ಒಂದು ಉತ್ಸವವೇ!

ಮಳೆಗಾಲ ಮುಗಿಯುತ್ತಿದ್ದಂತೆ ನಿಧಾನವಾಗಿ ವಾತಾವರಣ ಸ್ವಲ್ಪೆ ಸ್ವಲ್ಪ ಬೆಚ್ಚಗಾಗುತ್ತದೆ. ಹಣ್ಣುಗಳು ಮುಗಿದು ಕೆಲ ಮರಗಳು ಎಲೆ ಉದುರಿಸಲು ಶುರು ಮಾಡುತ್ತವೆ. ಮಳೆಗಾಲದ ವೈಭವ ಮುಗಿದು ಚಳಿಗಾಲದ ಸ್ಪೆಷಲ್  ಕಂಬಳಿಗಳು ಹೊರಬೀಳುತ್ತವೆ. 




Comments

  1. ಲೇಖನ ಓದುತತಿದ್ದಂತೆ ಒಮ್ಮೆ ತೇಜಸ್ವಿ ನೆನಪಾದರು... ಜೊತೆಯಲ್ಲೆ ನನ್ನ ಬಾಲ್ಯದ ದಿನಗಳು ಕೂಡ.. ಈ ತರದ ಬರವಣಿಗೆಗಳನ್ನ ಓದಿದಾಗೆಲ್ಲ " ಯಾವುದನ್ನೋ ಪಡೆಯುವುದಕ್ಕೆ ಎಷ್ಟೊಂದನ್ನ ಕಳೆದು ಕೊಳ್ಳುತ್ತಿದ್ದೇವೆ" ಎಂದೆನಿಸುತ್ತದೆ... ಏನೇ ಇರಲಿ ವನ್ಯ ಲೇಖನ ಓದಿದ ಮೇಲೆ ಏನೋ ಬರೆಯಬೇಕು ಅನ್ನುವ ಹಂಬಲ ವಾಗಿದ್ದೆಂತು ನಿಜ... ಖುಷಿ ಆಯ್ತು ನಮ್ಮೂರಿನ ನೆನಪುಗಳನ್ನ ಕಟ್ಟಿ ಕೊಟ್ಟಿದ್ದಕ್ಕೆ.. ಧನ್ಯವಾದಗಳು...
    - ಗುರು ಹೂಡ್ಲಮನೆ

    ReplyDelete

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರಜ್ನೆ ಇದೆಯೆ? ಭೂಮಿಯೂ ಒಂದು ಜೀವಿಯೆ?       ಈಗ ಜಾಗತಿಕ ವಿಷಯಗಳನ್ನು

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ್ ಮಾಡಿಗಿದ" ಎಂದು ನಂಬಿಸಿದ್ದಳು! ಅಂತೂ ಸಮಸ್ಯ

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ